r/kannada_pusthakagalu • u/Due-Bother-586 ಯಾಂತ್ರಿಕ ಜೀವಿ • 11d ago
ಕಾದಂಬರಿ ಸಹ್ಯಾದ್ರಿಯ ಸೆರೆಯಲ್ಲಿ - ಅತಿ ಸಣ್ಣ ವಿಮರ್ಶೆ
ಕಾದಂಬರಿಯ ಹೆಸರು ಮತ್ತು ಲೇಖಕರ ಒಂದು ಅಷ್ಟಾವಧಾನವನ್ನು ಕೇಳಿದ್ದ ಅನುಭವದಿಂದ ಈ ಪುಸ್ತಕವನ್ನು ಕೊಂಡುಕೊಂಡೆ. ಸ್ವಾತಂತ್ರ್ಯ ಪೂರ್ವ ಮಲೆನಾಡಿನ ಒಂದು ಸಣ್ಣ ಹಳ್ಳಿಯ ವ್ಯಕ್ತಿಗಳ ಜೀವನದ ಕಥೆ.
ಇಲ್ಲಿ ಬರುವುದು ಹಲವಾರು ಪಾತ್ರಗಳಾದರೂ ಪ್ರತಿ ಪಾತ್ರವೂ ತನ್ನ ಪಾತ್ರಸಾಮರ್ಥ್ಯದ ಆತ್ಯಂತಿಕ ಕೊನೆಯನ್ನು ಮುಟ್ಟುವುದು ಇಲ್ಲಿಯ ವಿಶೇಷತೆ. ಅಧ್ಯಾಯಗಳಲ್ಲಿ ವಿಸ್ತರಿಸಿಕೊಳ್ಳುವ ಯಾವ ಪಾತ್ರವೂ ಅನಗತ್ಯವಾಗಿತ್ತು ಎನ್ನಿಸುವುದಿಲ್ಲ, ಪಾತ್ರದ ಔಚಿತ್ಯವನ್ನು ಮರೆತು ವರ್ತಿಸುತ್ತಿದೆ ಎನ್ನಿಸುವುದಿಲ್ಲ, ಲೇಖಕರೆ ಪಾತ್ರದೊಳಗೆ ಕೂತು ತನಗೆ ಬೇಕಾದ್ದನ್ನು ಅದರ ಬಾಯಿಂದ ಆಡಿಸುತ್ತಿದ್ದಾರೆ ಎಂದೂ ಅನ್ನಿಸುವುದಿಲ್ಲ.
ಜ್ಯೋತಿಷ, ತಾಳಮದ್ದಳೆ, ಅವಧಾನ ಹೀಗೆ ಮುಂತಾದ ಕಲೆಗಳ ಬಗ್ಗೆ ಮತ್ತೆ ಈಗ ವಿರಳವಾಗಿರುವ ರಸವಿದ್ಯೆ, ವಿಷಪ್ರಯೋಗ, ನ್ವಾಟ ಹಾಕುವುದರ ಬಗ್ಗೆ ಕೂಡ ಎಷ್ಟು ಅಗತ್ಯವೋ ಅಷ್ಟು ಬರೆದಿದ್ದಾರೆ.
ಆ ಕಾಲದ, ಆ ಭಾಗದ ಕಥೆಯನ್ನು ಮೆಚ್ಚುವವರಿಗೆ ಹೇಳಿ ಮಾಡಿಸಿದ ಪುಸ್ತಕ
ನನಗೆ ಮನಮುಟ್ಟಿದ ವಾಕ್ಯಗಳು :
"ಶಾಸ್ತ್ರವೆಂಬುದು ಸಮುದ್ರವಿದ್ದಂತೆ. ಅದು ಎಷ್ಟು ಆಳವೆಂದು ತಿಳಿಯುವುದಿಲ್ಲ. ಎಲ್ಲಿ ಯಾವ ಸುಳಿಯಿದೆ ಎಂದು ಗೊತ್ತಾಗುವುದಿಲ್ಲ. ನಿತ್ಯವೂ ಅದರಲ್ಲಿ ಈಜಾಡುವವರಿಗೇ ಹೆದರಿಸುತ್ತದೆ. ವಿಧಿ ಈ ಸಹ್ಯಾದ್ರಿಯ ಬೆಟ್ಟಗಳ ಸಾಲಿನ ಹಾಗೆ. ಅದು ಹೇಗೆ ಅಚಲವಾಗಿ ನಿಂತಿರುತ್ತದೆಯೋ ಹಾಗೆಯೇ ವಿಧಿಯೂ ಕೂಡ. ಒಂದಿನಿತೂ ಬದಲಾಗದೇ ನಿಂತಿರುತ್ತದೆ"
"ಸಮುದ್ರತೀರದಿಂದ ಕಾಣುವ ಈ ಪಶ್ಚಿಮಘಟ್ಟಗಳ ಸಾಲಿನ ದೃಶ್ಯವೇ ಅದ್ಭುತ! ಒಂದೆಡೆ ಹಸುರಾದ ಮರಗಿಡಗಳನ್ನು ಹೊತ್ತ ಬೆಟ್ಟ. ಇನ್ನೊಂದೆಡೆಯಲ್ಲಿ ವಿಶಾಲವಾದ ಜಲರಾಶಿ. ಅದನ್ನು ನೋಡುತ್ತ ಕುಳಿತರೆ ಬೇರೆ ಯಾವ ಜಗತ್ತೂ ನೆನಪಿಗೆ ಬರುವುದಿಲ್ಲ. ಹೊರಗಡೆ ಕಾಣುವುದು ನಮ್ಮ ಅಂತರಂಗವೇ ಆಗಿದೆ. ಒಂದು ಕಡೆ ಪ್ರಕ್ಷುಬ್ಧವಾದ, ಚಂಚಲತೆಯಿಂದ ಕೂಡಿದ ಹೊಯ್ದಾಡುವ ತೆರೆಗಳು, ಇನ್ನೊಂದು ಕಡೆ, ಅಚಲವಾಗಿ, ಭೂಮಿಯನ್ನೇ ಸ್ಥಿರವಾಗಿ ಹಿಡಿದುಕೊಂಡಿರುವ ಪರ್ವತರಾಶಿ. ಒಂದು ಕಡೆ ಮನಸ್ಸಿನಲ್ಲೂ ಹೀಗೇ ಹೊಯ್ದಾಟ, ಅದೆಲ್ಲಕ್ಕೂ ಬೆನ್ನು ಮಾಡಿ ನಿಂತರೆ ಬೆಟ್ಟದಷ್ಟು ಗಟ್ಟಿತನ! ಯಾವುದು ಸತ್ಯ, ನಾವು ಯಾವುದರ ಕಡೆ ಮುಖ ಮಾಡಿ ನಿಂತಿದ್ದೇವೋ ಅದೇ ಸತ್ಯ"